ಉಪಲೋಕಾಯುಕ್ತರ ಪದಚ್ಯುತಿ ಯತ್ನ ಪ್ರಕರಣ: ಸಹಿ ಹಾಕಿದ 78 ಶಾಸಕರಲ್ಲಿ ಉಡುಪಿಯ ಪ್ರಮೋದ್ ಮಧ್ವರಾಜ್, ಮಂಗಳೂರಿನ ಜೆ.ಆರ್.ಲೋಬೋ ಭಾಗಿ !

* ಶ್ರೀರಾಮ ದಿವಾಣ
# ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಮತದಾರರಿಗೆ ವಚನ ನೀಡಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ) ಪಕ್ಷ, ರಾಜ್ಯದಲ್ಲಿ ಆಡಳಿತಕ್ಕೆ ಬಂದ ಬಳಿಕ ಯಾವುದೇ ನಾಚಿಕೆ, ಮಾನ ಮರ್ಯಾದೆ, ಮುಲಾಜೂ ಇಲ್ಲದೆ ರಾಜಾರೋಷವಾಗಿ ಭ್ರಷ್ಟಾಚಾರವೇ ಕಾಂಗ್ರೆಸ್ ಪಕ್ಷದ ನೀತಿ, ಧರ್ಮ ಎಂಬ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಮತ್ತು ಸ್ವಲ್ಪವೂ ಅಳುಕಿಲ್ಲದೆ ಭ್ರಷ್ಟರನ್ನು ರಕ್ಷಿಸುತ್ತಾ, ದಕ್ಷರನ್ನು ಶಿಕ್ಷಿಸುತ್ತಿದೆ ಎನ್ನುವುದಕ್ಕೆ ಘನ ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪಲೋಕಾಯುಕ್ತರಾದ ಸನ್ಮಾನ್ಯ ಸುಭಾಷ್ ಬಿ. ಅಡಿ ಅವರನ್ನು ಪದಚ್ಯುತಿಗೊಳಿಸಲು ಯತ್ನಿಸಿ ವಿಫಲಗೊಂಡ ಪ್ರಕರಣವೇ ಸಾಕ್ಷಿಯಾಗಿ ದಾಖಲಾಗಿರುವುದು ಒಂದು ಮಹತ್ತರ ಬೆಳವಣಿಗೆಯಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಶಾಸಕರಾಗಿ ಆಯ್ಕೆಯಾದ ಬಳಿಕವೂ ತಾನು ಭ್ರಷ್ಟಾಚಾರ ವಿರುದ್ಧ, ತನಗೆ ಭ್ರಷ್ಟಾಚಾರದ ಅಗತ್ಯವೇ ಇಲ್ಲ, ರಾಜ್ಯದಲ್ಲಿ ಇತರ ಶಾಸಕರಿಗಿಂತ ತಾನೇ ದೊಡ್ಡ ಸುಭಗ ಎಂಬಂತೆ ಹೋದಲ್ಲಿ ಬಂದಲ್ಲಿ ಮಾತನಾಡುತ್ತಾ, ಭಾಷಣ ಮಾಡುತ್ತಾ ಬಂದ ಪ್ರಮೋದ್ ಮಧ್ವರಾಜ್ ರವರ ನಿಜವಾದ ಬಣ್ಣವೂ ಸುಭಾಷ್ ಬಿ. ಅಡಿ ಪದಚ್ಯುತಿ ಯತ್ನ ಪ್ರಕರಣದ ಮುಖಾಂತರ ಬಯಲಾಗಿದೆ. ಪ್ರಮೋದ್ ಮಧ್ವರಾಜ್, ಬೈಂದೂರು ಕ್ಷೇತ್ರದ ಕೆ.ಗೋಪಾಲ ಪೂಜಾರಿ, ಮಂಗಳೂರು ಕ್ಷೇತ್ರದ ಜೆ.ಆರ್.ಲೋಬೋ, ಪುತ್ತೂರು ಕ್ಷೇತ್ರದ ಶ್ರೀಮತಿ ಶಕುಂತಲಾ ಶೆಟ್ಟಿಯವರೂ ಸಹ ಭ್ರಷ್ಟಾಚಾರದ ಪರವೇ ಎನ್ನುವುದು ಇದೀಗ ಅನುಮಾನಕ್ಕೆಡೆಯೇ ಇಲ್ಲದಂತೆ ಸ್ಪಷ್ಟವಾಗಿದೆ.
* ಪ್ರಮೋದ್ ಮಧ್ವರಾಜ್ * ಜೆ.ಆರ್.ಲೋಬೊ
ಪ್ರಾಮಾಣಿಕತೆ ಮತ್ತು ಕರ್ತವ್ಯ ದಕ್ಷತೆಗೆ ಮತ್ತೊಂದು ಹೆಸರು ಎಂಬಂತಿದ್ದ ಗೌರವಾನ್ವಿತ ಉಪಲೋಕಾಯುಕ್ತರಾದ ಸುಭಾಷ್ ಬಿ. ಅಡಿ ಅವರು ಭಾರೀ ಆರ್ಥಿಕ ಮತ್ತು ರಾಜಕೀಯ ಪ್ರಭಾವವಿದ್ದ ಪರಮ ಭ್ರಷ್ಟರಿಗೆ ಸಿಂಹಸ್ವಪ್ನದಂತಿದ್ದವರು ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ಸತ್ಯ ವಿಷಯವೇ ಆಗಿದೆ. ಕರ್ನಾಟಕ ಲೋಕಾಯುಕ್ತದ ಘನತೆ, ಗೌರವಗಳನ್ನು ದೇಶದ ಮಟ್ಟದಲ್ಲಿ ಹೆಚ್ಚಿಸಿದ ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ, ಸಂತೋಷ್ ಹೆಗ್ಡೆ ಮುಂತಾದವರ ಸಾಲಿನಲ್ಲಿ ಕೇಳಿ ಬಂದ ಹೆಸರೇ ಉಪಲೋಕಾಯುಕ್ತರಾದ ಸುಭಾಷ್ ಬಿ. ಅಡಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
* ಸುಭಾಷ್ ಬಿ. ಅಡಿ
ದೇಶದಲ್ಲಿಯೇ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತದ ಮಾನ ಹರಾಜಾಗಲು ಕಾರಣರಾಗಿದ್ದು ಲೋಕಾಯುಕ್ತರಾಗಿದ್ದ ವೈ.ಭಾಸ್ಕರ ರಾವ್ ಹಾಗೂ ಇತರರೇ ಹೊರತು, ಸುಭಾಷ್ ಬಿ. ಅಡಿ ಆಗಿರಲಿಲ್ಲ. ಲೋಕಾಯುಕ್ತರಾಗಿದ್ದ ಭಾಸ್ಕರ ರಾವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಸ್ವಜನ ಪಕ್ಷಪಾತ ಮೆರೆದುದು, ಪರಮ ಭ್ರಷ್ಟರ ವಿರುದ್ಧ ನಿಷ್ಟಕ್ಷಪಾತ ತನಿಖೆ ಕೈಗೊಳ್ಳಲು ಮತ್ತು ದಿಟ್ಟತನದ ಕಠಿಣ ಕಾನೂನು ಕ್ರಮ ಜರುಗಿಸಲು ಅಸಾಮರ್ಥ್ಯ ತೋರಿಸಿದ್ದು ಈ ಹಿಂದೆಯೇ ಜಗಜ್ಜಾಹೀರುಗೊಂಡ ವಿಷಯವೇ ಆಗಿದೆ. ಹೀಗಿರುವಾಗ, ಇಂಥವರ ಪದಚ್ಯುತಿಗಾಗಿ ಸರಕಾರವನ್ನು ಪ್ರತಿನಿಧಿಸಬೇಕಾಗಿದ್ದ ಆಡಳಿತ ಪಕ್ಷದ ಜನಪ್ರತಿನಿಧಿಗಳು, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಉಪಲೋಕಾಯುಕ್ತರಾದ ಸುಭಾಷ್ ಬಿ. ಅಡಿ ಅವರ ಪದಚ್ಯುತಿ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಪದಚ್ಯುತಿ ಪ್ರಸ್ತಾಪಕ್ಕೆ ಸಹಿ ಹಾಕಿದ್ದು ಅಕ್ಷಮ್ಯವೇ ಸರಿ.
* ವೈ.ಭಾಸ್ಕರ ರಾವ್
ಯಾವುದೋ ದುರುದ್ಧೇಶದಿಂದ, ಯಾರದೋ ಲಾಭಕ್ಕಾಗಿ, ಯಾರನ್ನೋ ರಕ್ಷಿಸುವ ಸಲುವಾಗಿ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಪದಚ್ಯುತಿ ಪ್ರಸ್ತಾಪಕ್ಕೆ ಸಹಿ ಹಾಕುವ ಮುಖಾಂತರ ಇಡೀ ಲೋಕಾಯುಕ್ತ ವ್ಯವಸ್ಥೆಯನ್ನೇ ಅತ್ಯಂತ ವ್ಯವಸ್ಥಿತವಾಗಿ ಮುಗಿಸಲು ಮುಂದಾದ ರಾಜ್ಯದ 78 ಶಾಸಕರ ಮೇಲೆ ರಾಜ್ಯದ ಮತದಾರರು ಇನ್ನಾದರೂ ಹದ್ದಿನಕಣ್ಣು ಇರಿಸುವುದರ ಜೊತೆಗೆ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕಾಗಿದೆ. ಮತದಾರರು ಹೀಗೆ ಮಾಡಿದ್ದೇ ಆದಲ್ಲಿ ಮಾತ್ರ ರಾಜ್ಯದ ಮತದಾರರು ತಮ್ಮ ಪ್ರಜ್ಞಾವಂತಿಕೆಯನ್ನು ಪ್ರದರ್ಶಿಸಿದ ಹಾಗಾಗುತ್ತದೆ. ಮಾತ್ರವಲ್ಲ, ಈ ಪ್ರಕ್ರಿಯೆಯೇ ದೇಶಕ್ಕೊಂದು ಮಾದರಿಯಾಗುತ್ತದೆ. ಇಡೀ ಭ್ರಷ್ಟ ವ್ಯವಸ್ಥೆಗೆ ಮತ್ತು ಭ್ರಷ್ಟಾಚಾರಕ್ಕೆ ಕೊಡುವ ಧೀರೋದಾತ್ತವಾದ, ಸಮರ್ಥ ಉತ್ತರವಾಗುತ್ತದೆ.
ಇಲ್ಲಿ ಒಂದು ಮುಖ್ಯ ಅಂಶವನ್ನು ಗಮನಿಸಬೇಕು. ಲೋಕಾಯುಕ್ತರಾಗಿದ್ದ ವೈ.ಭಾಸ್ಕರ ರಾವ್ ಬಳಗದ ಭ್ರಷ್ಟಾಚಾರ ಬಟಾ ಬಯಲಾದಾಗ ಸಹಜವಾಗಿಯೇ ವಿರೋಧ ಪಕ್ಷಗಳು ಅವರನ್ನು ಪದಚ್ಯುತಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿತು. ಈ ಹೊತ್ತಿನ ವರೆಗೂ ಮೌನವಾಗಿಯೇ ಇದ್ದ ರಾಜ್ಯದ ಕಾಂಗ್ರೆಸ್ ಸರಕಾರ, ಭಾಸ್ಕರ ರಾವ್ ಅವರು ಬಯಲಾದುದಕ್ಕೆ ಪ್ರತಿಕ್ರಿಯೆಯಾಗಿ, ಭಾಸ್ಕರ ರಾವ್ ತಮ್ಮ ಪಕ್ಷದ ಹೈಕಮಾಂಡ್, ತಮ್ಮ ಪಕ್ಷದ ಮುಖವಾಣಿ ಎಂಬಂತೆ ಉಪಲೋಕಾಯುಕ್ತರಾದ ಸುಭಾಷ್ ಬಿ. ಅಡಿ ಅವರನ್ನು ಗಂಭೀರವಾದ ಕಾರಣವೇ ಇಲ್ಲದಿದ್ದರೂ ಪದಚ್ಯುತಿಗೊಳಿಸುವ ಪ್ರಸ್ತಾಪವನ್ನು ವಿಧಾನಸಭೆಯ ಮುಂದಿಟ್ಟಿತು. ಇದರ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಲ್ಲದೇ ಇದ್ದರೆ, ಅಲ್ಪ ಸಮಯದಲ್ಲಿಯೇ ಈ ಪದಚ್ಯುತಿ ಯತ್ನ ನಡೆಯಲು ಸಾಧ್ಯವಿರಲಿಲ್ಲ. ಮಾತ್ರವಲ್ಲ, ಪಕ್ಷದ 78 ಶಾಸಕರು ಈ ಅಸಮರ್ಥನೀಯ ಪ್ರಸ್ತಾಪಕ್ಕೆ ಸಹಿ ಹಾಕಲು ಸಾಧ್ಯವಿರುತ್ತಿರಲಿಲ್ಲ.
ಲೋಕಾಯುಕ್ತರಾಗಿ ವೈ.ಭಾಸ್ಕರ ರಾವ್ ಅವರು ಇರುವುದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅತೀ ಅಗತ್ಯವಾಗಿ ಬೇಕಾಗಿತ್ತು. ಇವರೇ ಮುಖ್ಯಮಂತ್ರಿಗಳ ಧೈರ್ಯವಾಗಿತ್ತು. ಯಾವಾಗ ವೈ.ಭಾಸ್ಕರ ರಾವ್ ಈ ಹುದ್ದೆಯಿಂದ ಹೊರಗಡೆ ಹೋಗುತ್ತಾರೋ, ಇನ್ನು ಅಲ್ಲಿ ದಕ್ಷತೆಗೆ ಹೆಸರಾಗಿದ್ದ ಸುಭಾಷ್ ಬಿ. ಅಡಿ ಅವರು ಮಾತ್ರ ಇದ್ದಲ್ಲಿ ತನಗೆ ಉಳಿಗಾಲವೇ ಇಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಮನಗಂಡಿರುವುದೇ, ಕಾಂಗ್ರೆಸ್ ಸುಭಾಷ್ ಬಿ. ಅಡಿಯವರ ಪದಚ್ಯುತಿ ಯತ್ನಕ್ಕೆ ಮುಂದಾಯಿತು. ತಮ್ಮ ರಕ್ಷಣೆಗಾಗಿಯೇ ಬಳಿಕ ಲೋಕಾಯುಕ್ತವನ್ನು ನಿರ್ಜೀವಗೊಳಿಸಿತು. ಈಗ ತಮಗೆ ಬೇಕಾದವರನ್ನೇ ಲೋಕಾಯುಕ್ತರನ್ನಾಗಿ ಮಾಡುವ ಹುನ್ನಾರದಲ್ಲಿ ಮುಖ್ಯಮಂತ್ರಿಗಳಿರುವುದು ಕಂಡುಬರುತ್ತಿದೆ.
ಪ್ರಾಮಾಣಿಕ ಮತ್ತು ದಕ್ಷ ಉಪಲೋಕಾಯುಕ್ತರಾದ ಸುಭಾಷ್ ಬಿ. ಅಡಿ ಪದಚ್ಯುತಿ ಪ್ರಸ್ತಾಪಕ್ಕೆ ಸಹಿ ಹಾಕಿದವರು ತನ್ವೀರ್ ಸೇಠ್ (ನರಸಿಂಹರಾಜವಿಧಾನಸಭಾ ಕ್ಷೇತ್ರ) ಹಾಗೂ ಪ್ರಮೋದ್ ಮಧ್ವರಾಜ್ (ಉಡುಪಿ) ಮಾತ್ರವಲ್ಲ, ಇವರ ಸಾಲಿನಲ್ಲಿ ಇವರಂತಿರುವ ಇನ್ನೂ 76 ಮಂದಿ ಶಾಸಕರಿದ್ದಾರೆ.
ಶ್ರೀಮತಿ ಶಾರದಾ ಮೋಹನ್ ಶೆಟ್ಟಿ (ಕುಮಟಾ), ಜೆ.ಟಿ.ಪಾಟೀಲ್ (ಬೀಳಗಿ), ಪ್ರಸನ್ನ ಕುಮಾರ್ ಕೆ.ಬಿ. (ಶಿವಮೊಗ್ಗ), ಡಾ.ಸುಧಾಕರ್ ಕೆ. (ಚಿಕ್ಕಬಳ್ಳಾಪುರ), ಎಸ್.ಜಯಣ್ಣ(ಕೊಳ್ಳೆಗಾಲ), ಎಂ.ಪಿ.ರವಿ( ), ಬಸವರಾಜ ಬಿ.ಎ. (ಕೆ.ಆರ್.ಪುರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಎಂ.ಕೃಷ್ಣಪ್ಪ (ವಿಜಯನಗರ), ಮುನಿರತ್ನ (ರಾಜರಾಜೇಶ್ವರಿ ನಗರ), ಯೋಗೇಶ್ವರ ಸಿ.ಪಿ. (ಚನ್ನಪಟ್ಟಣ), ಆರ್.ವಿ. ದೇವರಾಜ್ (ಚಿಕ್ಕಪೇಟೆ), ಆರ್.ನರೇಂದ್ರ (ಹನೂರು), ………….. ( ), ಸಿ.ಪುಟ್ಟರಂಗ ಶೆಟ್ಟಿ (ಚಾಮರಾಜನಗರ), ಫಿರೋಜ್ ನೂರುದ್ದೀನ್ ಶೇಠ್ (ಬೆಳಗಾಂ ಉತ್ತರ), ಬಿ.ಜಿ.ಗೋವಿಂದಪ್ಪ (ಹೊಸದುರ್ಗ), ……………. ( ), ಡಾ.ರಫೀಕ್ ಅಹ್ಮದ್ ಎಸ್. (ತುಮಕೂರು ನಗರ), ಡಾ.ಉಮೇಶ್ ಜಿ. ಜಾಧವ (ಚಿಂಚೋಳಿ), ಕೆ.ಷಡಕ್ಷರಿ (ತಿಪಟೂರು), ಎನ್.ಎ.ಹ್ಯಾರೀಸ್ (ಶಾಂತಿನಗರ), ಎನ್.ವೈ. ಗೋಪಾಲಕೃಷ್ಣ (ಬಳ್ಳಾರಿ), ಪ್ರಿಯಾಂಕ್ ಎಂ.ಖರ್ಗೆ (ಚಿತ್ತಾಪೂರ), ಅರಬೈಲ್ ಶಿವರಾಮ ಹೆಬ್ಬಾರ್ (ಯಲ್ಲಾಪುರ), ಜೆ.ಆರ್.ಲೋಬೋ (ಮಂಗಳೂರು ನಗರ ದಕ್ಷಿಣ), ದೊಡ್ಡಮನಿ ರಾಮಕೃಷ್ಣ ಶಿದ್ಲಿಂಗಪ್ಪ (ಶಿರಹಟ್ಟಿ), ಡಿ.ಜಿ.ಶಾಂತನಗೌಡ (ಹೊನ್ನಾಳಿ), ………. ( ), ………….. ( ), ಜಿ.ಎಚ್.ಶ್ರೀನಿವಾಸ (ತರೀಕೆರೆ), ವಾಸು (ಚಾಮರಾಜ), ಟಿ.ರಘುಮೂರ್ತಿ (ಚಳ್ಳಕೆರೆ), ಕೆ.ವೆಂಕಟೇಶ್ (ಪಿರಿಯಾಪಟ್ಟಣ), ಜಿ.ಎಸ್.ಪಾಟೀಲ್ (ರೋಣ), ಎಸ್.ಎನ್.ನಾರಾಯಣ ( ), ಪಿ.ಎಂ.ನರೇಂದ್ರ ಸ್ವಾಮಿ (ಮಳವಳ್ಳಿ), ಕ್ಯಾತಸಂದ್ರ ಎನ್.ರಾಜಣ್ಣ (ಮಧುಗಿರಿ), ಕೆ.ರಾಘವೇಂದ್ರ ಬಸವರಾಜ್ (ಹಿಟ್ನಾಳ), ಬಿ.ಎಂ.ನಾಗರಾಜ್ (ಹೊಸಕೋಟೆ), ಮಕ್ಬುಲ್ ಎಸ್. ( ), ………. ( ), ಶಿವಣ್ಣ ಬಿ. (ಆನೇಕಲ್), ಡಾ.ಎ.ಬಿ.ಮಾಲಕ ರೆಡ್ಡಿ (ಯಾದಗಿರಿ), ……………… ( ), ಇನಾಂದಾರ್ ದಾ. ಬಸನಗೌಡ (ಕಿತ್ತೂರು), ಡಾ.ಅಜಯ್ ಧರ್ಮಸಿಂಗ್ (ಜೇವರ್ಗಿ), ರುದ್ರಪ್ಪ ಎಂ. ಲಮಾಣಿ (ಹಾವೇರಿ), ಎಂ.ಕೆ.ಸೋಮಶೇಖರ್ (ಕೃಷ್ಣರಾಜ), ಅನಿಲ್ ಎಚ್. ಲಾಡ್ (ಬಳ್ಳಾರಿ ನಗರ), ಕೆ.ಬಿ.ಕೋಳಿವಾಡ (ರಾಣಿಬೆನ್ನೂರು), ಅಪ್ಪಾಜಿ ಸಿ.ಎಸ್.ನಾಡಗೌಡ (ಮುದ್ದೆಬಿಹಾಳ), ರಮೇಶ ಜಾರಕಿಹೊಳಿ (ಗೋಕಾಕ್), ಶಕುಂತಲಾ ಟಿ.ಶೆಟ್ಟಿ (ಪುತ್ತೂರು), ರಾಜು ( ), ಈಶ್ವರ್ ಬಿ. ಖಂಡ್ರೆ (ಭಾಲ್ಕಿ), ಜಿ.ರಾಮಕೃಷ್ಣ (ಗುಲ್ಬರ್ಗಾ ಗ್ರಾಮಾಂತರ), ರಮೇಶ್ ಕುಮಾರ್ (ಶ್ರೀನಿವಾಸಪುರ), ಕೆ.ಗೋಪಾಲ ಪೂಜಾರಿ (ಬೈಂದೂರು), ಬಿ.ಆರ್.ಯಾವಗಲ್ (ನರಗುಂದ), ಎಚ್.ಪಿ.ರಾಜೇಶ್ (ಜಗಳೂರು), ಪಾಟೀಲ್ ( ), ಎಚ್.ಪಿ.ಮಂಜುನಾಥ್ (ಹುಣಸೂರು), ವೈ.ವಿ.ಪಾಟೀಲ್ ( ), ಸಿ.ಎಸ್. ( ), ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ ಧಾರವಾಡ ಪೂರ್ವ), ಸತೀಶ್ ಸೈಲ್ (ಕಾರವಾರ), ಇ. ತುಕಾರಾಂ (ಸಂಡೂರು), ………… ( ), ವಡ್ನಾಳ್ ರಾಜಣ್ಣ (ಚನ್ನಗಿರಿ).
ಪ್ರಸ್ತಾಪಕ್ಕೆ ಸಹಿ ಹಾಕಿದ ಎಲ್ಲಾ 78 ಮಂದಿ ಶಾಸಕರೂ ಇನ್ನಾದರೂ ರಾಜ್ಯದ ಸಮಸ್ತ ಜನರ ಕ್ಷಮೆ ಯಾಚಿಸುವದರ ಜೊತೆಗೆ ತಮ್ಮ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡುವುದು ಸೂಕ್ತ. ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಸಹಿತ ಸಚಿವ ಸಂಪುಟದ ಸದಸ್ಯರು ಸಹಿ ಹಾಕದೇ ಇರುವುದನ್ನು ಇಲ್ಲಿ ಗಮನಿಸಬಹುದು. ಇದೊಂದು ಬುದ್ಧಿವಂತಿಕೆಯ ಕ್ರಮವಷ್ಟೇ ಆಗಿರಬಹುದು ಎಂಬುದನ್ನು ಸಹ ಇಲ್ಲಿ ಯಾರು ಬೇಕಾದರೂ ಊಹಿಸಬಹುದು. ಇದನ್ನು ಪರಿಶೀಲಿಸಿದರೆ ಈ ಇಡೀ ಪ್ರಕ್ರಿಯೆಯಲ್ಲಿ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ನೇರವಾಗಿ ಶಾಮೀಲಾಗಿದೆ ಎಂದೂ ಸಂಶಯಕ್ಕೆಡೆಯೇ ಇಲ್ಲದಂತೆ ಹೇಳಬಹುದು.
* ಕೆ.ಗೋಪಾಲ ಪೂಜಾರಿ * ಶ್ರೀಮತಿ ಶಕುಂತಲಾ ಟಿ.ಶೆಟ್ಟಿ
Related Posts
About Shreeram Diwana
+91-8105749711 nimmadiwan@gmail.com